
ಉನ್ನಾವ್/ಲಕ್ನೋ, ಜುಲೈ ೨೮: ಉತ್ತರ ಪ್ರದೇಶದಲ್ಲಿ ಸುಮಾರು ₹೪,೨೦೦ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ೬೩ ಕಿಲೋಮೀಟರ್ ಉದ್ದದ ಲಕ್ನೋ-ಕಾನ್ಪುರ ಗ್ರೀನ್ಫೀಲ್ಡ್ ಎಲಿವೇಟೆಡ್ ಎಕ್ಸ್ಪ್ರೆಸ್ವೇ ಉದ್ಘಾಟನೆಗೊಂಡ ಕೇವಲ ೧೨ ದಿನಗಳಲ್ಲೇ ಹಲವೆಡೆ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜುಲೈ ೧೩ ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಹೆದ್ದಾರಿಯನ್ನು ವಿಜೃಂಭಣೆಯಿಂದ ಉದ್ಘಾಟಿಸಿದ್ದರು. ಆದರೆ, ಮುಂಗಾರಿನ ಮೊದಲ ಮಳೆಯಾಗುತ್ತಿದ್ದಂತೆ ಉನ್ನಾವ್ ಜಿಲ್ಲೆಯ ಕೊರಾರಿ ಗ್ರಾಮದ ಬಳಿ ಎಕ್ಸ್ಪ್ರೆಸ್ವೇ ರಸ್ತೆಯ ಮೇಲ್ಭಾಗದಲ್ಲಿ ದೊಡ್ಡ ಮಟ್ಟದ ಬಿರುಕುಗಳು ಕಾಣಿಸಿಕೊಂಡು, ರಸ್ತೆಯ ಒಂದು ಭಾಗ ಕುಸಿದಿದೆ.ಸಾಮಾಜಿಕ ಜಾಲತಾಣಗಳಲ್ಲಿ ಈ ರಸ್ತೆ ಬಿರುಕು ಬಿಟ್ಟಿರುವ ಹಾಗೂ ಕುಸಿದಿರುವ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಮಧುಸೂದನ್ ಯಾದವ್ ಅವರು ಸ್ಥಳಕ್ಕೆ ಭೇಟಿ ನೀಡಿ ಸುಮಾರು ೫ ರಿಂದ ೭ ಮೀಟರ್ಗಳಷ್ಟು ಉದ್ದದ ರಸ್ತೆ ಕುಸಿದಿರುವುದನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ್ದಾರೆ. ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಬಳಸಿ ನಿರ್ಮಿಸಲಾದ ಹೆದ್ದಾರಿ ಕೇವಲ ಎರಡು ವಾರಗಳಲ್ಲೇ ಈ ಸ್ಥಿತಿಗೆ ತಲುಪಿರುವುದು ಯೋಜನೆಯ ಅನುಷ್ಠಾನದಲ್ಲಿ ನಡೆದ ಭ್ರಷ್ಟಾಚಾರ ಮತ್ತು ತಾಂತ್ರಿಕ ಲೋಪಗಳನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಸಂಬಂಧಪಟ್ಟ ನಿರ್ಮಾಣ ಸಂಸ್ಥೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ತುರ್ತು ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ.
ಯೋಜನೆ ನಿರ್ವಹಿಸಿದ ‘ಪಿಎನ್ಸಿ ಇನ್ಫ್ರಾಟೆಕ್’ ಸಂಸ್ಥೆಯು ಹಾನಿಗೊಳಗಾದ ಭಾಗವನ್ನು ಸರಿಪಡಿಸುವ ಕೆಲಸ ಆರಂಭಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ NHAI ಯೋಜನಾ ನಿರ್ದೇಶಕ ನಕುಲ್ ಪ್ರಕಾಶ್ ವರ್ಮಾ, “ಇದು ರಚನಾತ್ಮಕ ವೈಫಲ್ಯವಲ್ಲ, ಬದಲಿಗೆ ಅತಿಯಾದ ಮಳೆಯಿಂದಾಗಿ ರಸ್ತೆಯ ಮೇಲ್ಪದರದ (top wearing coat) ಸುಮಾರು ೪೦ ಮೀಟರ್ ಭಾಗದಲ್ಲಿ ಮಾತ್ರ ಸಣ್ಣ ಪ್ರಮಾಣದ ಜಾರುವಿಕೆ ಉಂಟಾಗಿದೆ” ಎಂದು ತಿಳಿಸಿದ್ದು, ದುರಸ್ತಿ ಮುಗಿಸಿ ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.ಆದಾಗ್ಯೂ, ಶತಕೋಟಿ ರೂಪಾಯಿ ವೆಚ್ಚದ ಬೃಹತ್ ಮೂಲಸೌಕರ್ಯ ಯೋಜನೆಯು ಮೊದಲ ಮಳೆಗಾಲವನ್ನೇ ತಡೆಯಲು ಸಾಧ್ಯವಾಗದೇ ಇರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಕಳವಳ ಮತ್ತು ಅಪನಂಬಿಕೆಯನ್ನು ಹುಟ್ಟುಹಾಕಿದೆ. ನಿಯಮಿತ ತಪಾಸಣೆ, ತಾಂತ್ರಿಕ ಮೇಲ್ವಿಚಾರಣೆ ಹಾಗೂ ಗುತ್ತಿಗೆದಾರರ ಉತ್ತರದಾಯಿತ್ವದ ಕೊರತೆಯೇ ಇಂತಹ ಘಟನೆಗೆ ಕಾರಣ ಎಂದು ರಸ್ತೆ ಬಳಕೆದಾರರು ಹಾಗೂ ವಿಶ್ಲೇಷಕರು ಕಿಡಿಕಾರಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಮತ್ತು ನಿರ್ಮಾಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



