Health + News

ಪ್ಯಾಕೆಟ್‌ ಆಹಾರದ ಎಚ್ಚರಿಕೆ ಲೇಬಲ್‌ ವಿಚಾರ: ‘ಕಾರ್ಪೊರೇಟ್‌ ಒತ್ತಡಕ್ಕೆ ಮಣಿಯುತ್ತಿದ್ದೀರಾ?’ FSSAIಗೆ ಸುಪ್ರೀಂ ಕೋರ್ಟ್‌ ತರಾಟೆ

ನವದೆಹಲಿ, ಆಗಸ್ಟ್‌ 14: ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್‌ ಕೊಬ್ಬಿನಂಶ ಹೆಚ್ಚಿರುವ ಪ್ಯಾಕೆಟ್‌ ಆಹಾರಗಳ ಮೇಲೆ ಮುಂಭಾಗದಲ್ಲೇ ಎಚ್ಚರಿಕೆ ಲೇಬಲ್‌ ಅಳವಡಿಸುವ ವಿಚಾರದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಮಹತ್ವದ ವಿಚಾರದಲ್ಲಿ ಆಹಾರ ಉತ್ಪಾದನಾ ಕಂಪನಿಗಳ ಒತ್ತಡಕ್ಕೆ ಮಣಿಯುತ್ತಿದ್ದೀರಾ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್‌ ಚಂದ್ರನ್‌ ಅವರ ಪೀಠ FSSAIಯನ್ನು ಪ್ರಶ್ನಿಸಿದೆ. ಗ್ರಾಹಕರು ತಾವು ಖರೀದಿಸುವ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ಯಾಕೆಟ್‌ ಆಹಾರಗಳಲ್ಲಿ ಈ ಅಂಶಗಳ ಪ್ರಮಾಣ ಹೆಚ್ಚಿದ್ದರೆ ಮುಂಭಾಗದಲ್ಲೇ ಎಚ್ಚರಿಕೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ FSSAI ಎಚ್ಚರಿಕೆ ಚಿಹ್ನೆಗಳ ಬದಲಿಗೆ ದಿನನಿತ್ಯ ಸೇವಿಸಬಹುದಾದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಶಿಫಾರಸು ಪ್ರಮಾಣವನ್ನು ಚಿತ್ರಾತ್ಮಕವಾಗಿ ತೋರಿಸುವ ಪ್ರಸ್ತಾವನೆ ಮುಂದಿಟ್ಟಿರುವುದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ಮಕ್ಕಳ ಆರೋಗ್ಯ ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಇಂತಹ ವಿಚಾರದಲ್ಲಿ ಯಾವುದೇ ವಾಣಿಜ್ಯ ಹಿತಾಸಕ್ತಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಮತ್ತು FSSAIಗೆ ಎರಡು ವಾರಗಳ ಕಾಲಾವಕಾಶ ನೀಡಿರುವ ನ್ಯಾಯಾಲಯ, ಸ್ವಯಂಪ್ರೇರಿತವಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಮುಂದಿನ ಆದೇಶ ನೀಡಬೇಕಾಗುತ್ತದೆ ಎಂಬ ಕಠಿಣ ಸಂದೇಶ ನೀಡಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft