
ಬೆಂಗಳೂರು/ಮುಂಬೈ: ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತ್ವರಿತ ವಾಣಿಜ್ಯ ವಿತರಣಾ ಸಂಸ್ಥೆಗಳಾದ ಝೆಪ್ಟೋ ಮತ್ತು ಬ್ಲಿಂಕಿಟ್ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದ ಹೊಸಕೋಟೆ ತಾಲೂಕಿನಲ್ಲಿರುವ ಝೆಪ್ಟೋ ಗೋದಾಮಿನಲ್ಲಿ ಆಹಾರ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಸ್ವಚ್ಛತೆಯ ಕೊರತೆ, ಸೂಕ್ತವಲ್ಲದ ಲೇಬಲಿಂಗ್ ಹಾಗೂ ಉತ್ಪನ್ನಗಳ ತಪ್ಪು ವಿವರ ನೀಡಿರುವುದು ಸೇರಿದಂತೆ ಹಲವು ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ಗೋದಾಮನ್ನು ಮುಚ್ಚಲಾಗಿದೆ.
ಮಹಾರಾಷ್ಟ್ರದ ಮುಂಬೈನ ಮಲಾಡ್ ಪಶ್ಚಿಮದಲ್ಲಿರುವ ಬ್ಲಿಂಕಿಟ್ಗೆ ಸಂಬಂಧಿಸಿದ ಘಟಕದಲ್ಲೂ ಗಂಭೀರ ಆಹಾರ ಸುರಕ್ಷತಾ ಲೋಪಗಳು ಪತ್ತೆಯಾಗಿವೆ. ಅಧಿಕಾರಿಗಳ ಪರಿಶೀಲನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಿರಳೆಗಳ ಹಾವಳಿ, ಆಹಾರ ಪದಾರ್ಥಗಳ ಅಸಮರ್ಪಕ ಸಂಗ್ರಹಣೆ, ಹಳೆಯ ಹಾಗೂ ಹಾನಿಗೊಳಗಾದ ಉತ್ಪನ್ನಗಳು ಮತ್ತು ಶೀತಲೀಕರಣ ವಿಭಾಗದಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಘಟಕದ ಆಹಾರ ಪರವಾನಗಿಯನ್ನು ಅಮಾನತುಗೊಳಿಸಿದೆ.
ಇದೇ ವೇಳೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ರಿಲಯನ್ಸ್ ರಿಟೇಲ್ ಮಳಿಗೆಯಲ್ಲೂ ಆಹಾರ ಸುರಕ್ಷತೆ ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಮಳಿಗೆಯಲ್ಲಿ ಮಾರಾಟವಾಗುತ್ತಿದ್ದ ಪ್ಯಾಕ್ ಮಾಡಲಾದ ‘ಲಕ್ಷ್ಮೀ ನಾರಾಯಣ’ ಬ್ರ್ಯಾಂಡ್ನ ಕಾಜು ಕಟ್ಲಿಯಲ್ಲಿ ಜೀವಂತ ಲಾರ್ವಾಗಳು ಪತ್ತೆಯಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿದ್ದ ಬ್ಯಾಚ್ ಮಳಿಗೆಯಲ್ಲಿ ಲಭ್ಯವಿರದ ಕಾರಣ, ಮತ್ತೊಂದು ಬ್ಯಾಚ್ನ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯವಿದ್ದ 54 ಬಾಕ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣೆ, ಸ್ವಚ್ಛತೆ ಮತ್ತು ಲೇಬಲಿಂಗ್ನಲ್ಲಿ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಗ್ರಾಹಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆಹಾರ ವ್ಯಾಪಾರ ಸಂಸ್ಥೆಗಳು ಸ್ವಚ್ಛತೆ, ಕೀಟ ನಿಯಂತ್ರಣ, ಸೂಕ್ತ ಸಂಗ್ರಹಣೆ ಮತ್ತು ಅವಧಿ ಮೀರಿದ ಆಹಾರಗಳ ಸುರಕ್ಷಿತ ವಿಲೇವಾರಿ ಸೇರಿದಂತೆ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.



