News

ನಿಜವಾದ ಭಾರತೀಯರಾಗಿದ್ದರೇ, ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ; ರಾಹುಲ್ ಗಾಂಧಿಗೆ ಸುಪ್ರೀಂ ಚಾಟಿ


ಒಂದು ವೇಳೆ ನೀವು ನಿಜವಾದ ಭಾರತೀಯರಾಗಿದ್ದರೇ, ಇದನ್ನೆಲ್ಲಾ ಹೇಳುತ್ತಿರಲಿಲ್ಲ. ಚೀನಾ ದೇಶವು ಭಾರತದ 2 ಸಾವಿರ ಚದರ ಕಿಲೋಮೀಟರ್ ಭೂಮಿ ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು? ಎಂದು ಸುಪ್ರೀಂಕೋರ್ಟ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿರನ್ನು ತರಾಟೆಗೆ ತೆೆಗೆದುಕೊಂಡಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿರನ್ನು ಸುಪ್ರೀಂ ಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಚೀನಾ ದೇಶವು ಅರುಣಾಚಲ ಪ್ರದೇಶದಲ್ಲಿ 2 ಸಾವಿರ ಚದರ ಕಿಲೋ ಮೀಟರ್ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಲಕ್ನೋದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್ ರದ್ದುಪಡಿಸಬೇಕೆಂದು ರಾಹುಲ್ ಗಾಂಧಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವಾಗ, ಸುಪ್ರೀಂ ಕೋರ್ಟ್​ನ ಜಸ್ಟೀಸ್ ದೀಪಾಂಕರ್ ದತ್ತಾ ಪೀಠವು ರಾಹುಲ್ ಗಾಂಧಿರನ್ನು ತರಾಟೆಗೆ ತೆಗೆದುಕೊಂಡಿದೆ. ಭಾರತದ 2 ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು? ಒಂದು ವೇಳೆ ನೀವು ನಿಜವಾದ ಭಾರತೀಯರಾಗಿದ್ದರೇ ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ. ನೀವು ಅಲ್ಲಿ ಇದ್ದೀರಾ? ನಿಮ್ಮ ಬಳಿ ವಿಶ್ವಾಸಾರ್ಹ ಸಾಕ್ಷಿ, ಆಧಾರ ಇದೆಯೇ? ಎಂದು ಜಸ್ಟೀಸ್ ದೀಪಾಂಕರ್ ದತ್ತಾ ಹೇಳಿದ್ದಾರೆ.

ಕೊನೆಗೆ ಲಕ್ನೋದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವು ಗಾಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಚೀನಾಗೆ ಶರಣಾಗತಿ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇನ್ನೂ ಸುಪ್ರೀಂ ಕೋರ್ಟ್​​ನಲ್ಲಿ ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ರಾಹುಲ್ ಗಾಂಧಿ ಇದನ್ನೆಲ್ಲಾ ಹೇಳದೇ ಇದ್ದರೆ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಹೇಗಾಗುತ್ತಾರೆ ಎಂದಿದ್ದಾರೆ. ಹಾಗಾದರೆ ನೀವು ಇದನ್ನು ಪಾರ್ಲಿಮೆಂಟ್​ನಲ್ಲಿ ಏಕೆ ಹೇಳಲಿಲ್ಲ? ಎಂದು ಸುಪ್ರೀಂಕೋರ್ಟ್ ಮರು ಪ್ರಶ್ನಿಸಿತು. ಜಸ್ಟೀಸ್ ದೀಪಾಂಕರ್ ದತ್ತಾ, ಚೀನಾ 2 ಸಾವಿರ ಚದರ ಕಿಲೋಮೀಟರ್ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತು? ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ಜಡ್ಜ್ ದೀಪಾಂಕರ್ ದತ್ತಾ

ಬಳಿಕ ವಾದ ಮುಂದುವರಿಸಿದ ಅಭಿಷೇಕ್ ಮನುಸಿಂಘ್ವಿ, ಆರೋಪಗಳನ್ನು ಹೊರಿಸುವಲ್ಲಿ ತಪ್ಪು ಆಗಿದೆ. ಕ್ರಿಮಿನಲ್ ದೂರಿನ ಕಾಂಗ್ನಿಜೆನ್ಸ್ ತೆಗೆದುಕೊಳ್ಳುವ ಮುನ್ನ ರಾಹುಲ್ ಗಾಂಧಿಗೆ ಕೋರ್ಟ್​ನಲ್ಲಿ ವಾದಿಸಲು ಅವಕಾಶ ಕೊಟ್ಟಿಲ್ಲ ಎಂದು ವಾದಿಸಿದ್ದರು. ಫೆಬ್ರವರಿ ತಿಂಗಳಲ್ಲಿ ಲಕ್ನೋದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ರಾಹುಲ್ ಗಾಂಧಿಗೆ ಖುದ್ದಾಗಿ ಹಾಜರಾಗಲು ಸಮನ್ಸ್ ನೀಡಿತ್ತು. ಇದನ್ನು ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.

ಅಲಹಾಬಾದ್ ಹೈಕೋರ್ಟ್​ನ ಜಡ್ಜ್ ಸುಭಾಷ್ ವಿದ್ಯಾರ್ಥಿ, ರಾಹುಲ್ ಗಾಂಧಿ ವಾದವನ್ನು ತಿರಸ್ಕರಿಸಿದ್ದರು. ತಮಗೆ ಸಮನ್ಸ್ ನೀಡುವ ಮೊದಲು ಸ್ಪೆಷಲ್ ಕೋರ್ಟ್, ಆರೋಪವನ್ನು ಪರಿಶೀಲಿಸಬೇಕಾಗಿತ್ತು. ತಮ್ಮ ವಿರುದ್ಧದ ಆರೋಪ ರಾಜಕೀಯ ಪ್ರೇರಿತ ಎಂದು ಹೈಕೋರ್ಟ್​ನಲ್ಲಿ ರಾಹುಲ್ ಗಾಂಧಿ ವಾದಿಸಿದ್ದರು.
ಉತ್ತರ ಪ್ರದೇಶದ ಉದಯ ಶಂಕರ್ ಶ್ರೀವಾಸ್ತವ್ ಎಂಬುವವರು, 2022ರ ಡಿಸೆಂಬರ್​ನಲ್ಲಿ ಲಕ್ನೋದ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್​ನಲ್ಲಿ ವಿಚಾರಣೆೆಗೆ ಹಾಜರಾಗಲು ಲಕ್ನೋದ ವಿಶೇಷ ಕೋರ್ಟ್, ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು. ಈ ಸಮನ್ಸ್ ಅನ್ನು ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ.

ಮ್ಮ ಆರೋಪವನ್ನು 2023ರ ಜನವರಿಯಲ್ಲೂ ರಾಹುಲ್ ಗಾಂಧಿ ಮುಂದುವರಿಸಿದ್ದರು. ಶ್ರೀನಗರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕೇಂದ್ರದ ಮೋದಿ ಸರ್ಕಾರವು, ಚೀನಾ ದೇಶ, ನಮ್ಮ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂಬುದನ್ನು ನಿರಾಕರಿಸುತ್ತಿರುವುದು ಡೇಂಜರಸ್ ಎಂದು ಹೇಳಿದ್ದರು. ನಾನು ಆರೋಪವನ್ನು ಮತ್ತೆ ಮತ್ತೆ ಮಾಡುತ್ತೇನೆ ಎಂದಿದ್ದರು.

admin

About Author

Leave a Reply

Your email address will not be published. Required fields are marked *

Get Latest Updates and big deals

    Our expertise, as well as our passion for web design, sets us apart from other agencies.

    Dream Times @2025. All Rights Reserved. Powered By Exalt Techsoft