
ಬೆಂಗಳೂರು, ಮೇ 16, 2026: ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಪರವಾಗಿ ಆಡುವ ಕುರಿತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಸ್ಪಷ್ಟ ಹಾಗೂ ಖಡಕ್ ಸಂದೇಶ ರವಾನಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಯೋಜಿಸಿದ್ದ ವಿಶೇಷ ಪೋಡ್ಕಾಸ್ಟ್ನಲ್ಲಿ ಮುಕ್ತವಾಗಿ ಮಾತನಾಡಿದ ಅವರು, ವಿಶ್ವಕಪ್ನಲ್ಲಿ ಭಾಗವಹಿಸುವ ನಿರ್ಧಾರವನ್ನು ತಮ್ಮದೇ ಆದ ಸ್ವಂತ ಷರತ್ತುಗಳ ಅಡಿಯಲ್ಲಿ ಮಂಡಳಿಯ ವಿವೇಚನೆಗೆ ಬಿಟ್ಟಿರುವುದಾಗಿ ತಿಳಿದ್ದಾರೆ. ಕ್ರಿಕೆಟ್ ಲೋಕದ ಅತ್ಯುನ್ನತ ಮಂಡಳಿಯಾದ ಬಿಸಿಸಿಐ ಈ ಕುರಿತು ಹತ್ತು ಬಾರಿ ಯೋಚಿಸುವಂತೆ ಮಾಡುವಲ್ಲಿ ಕೊಹ್ಲಿ ಅವರ ಈ ಮಾತುಗಳು ಯಶಸ್ವಿಯಾಗಿದ್ದು, ಮಂಡಳಿಯನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ಇತ್ತೀಚಿನ ದಿನಗಳಲ್ಲಿ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ಮಾದರಿಗಳಿಂದ ದೂರ ಸರಿದು, ಕೇವಲ ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರುವ ಕೊಹ್ಲಿ, ತಂಡದಲ್ಲಿ ತಮಗೆ ಸಿಗಬೇಕಾದ ಗೌರವ ಮತ್ತು ಮೌಲ್ಯದ ಕುರಿತು ತೀವ್ರ ಬೇಸರ ಹೊರಹಾಕಿದ್ದಾರೆ. “ನಾನು ತಂಡದ ವಾತಾವರಣಕ್ಕೆ ಮೌಲ್ಯವನ್ನು ತರಬಲ್ಲೆ ಮತ್ತು ಅಲ್ಲಿನ ಮಂಡಳಿಯೂ ನನ್ನ ಮೌಲ್ಯವನ್ನು ಗುರುತಿಸುತ್ತದೆ ಎನ್ನುವ ನಂಬಿಕೆ ಇದ್ದರೆ ಮಾತ್ರ ನಾನು ಮೈದಾನದಲ್ಲಿ ಕಾಣಿಸಿಕೊಳ್ಳುತ್ತೇನೆ” ಎಂದು ಕೊಹ್ಲಿ ನೇರ ನುಡಿಗಳಲ್ಲಿ ಹೇಳಿದ್ದಾರೆ. ಪ್ರತಿ ಬಾರಿ ಸರಣಿ ಬಂದಾಗಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ತಮಗಿಲ್ಲ ಎಂದು ಅವರು ಬಿಸಿಸಿಐ ಆಯ್ಕೆ ಸಮಿತಿಗೆ ಪರೋಕ್ಷವಾಗಿ ಅಲ್ಟಿಮೇಟಂ ನೀಡಿದ್ದಾರೆ.
ವಿರಾಟ್ ಕೊಹ್ಲಿ ಅವರ ಈ ದಿಢೀರ್ ನಿಲುವಿನ ಹಿಂದೆ ಬಿಸಿಸಿಐನ ಕೆಲವು ಕಠಿಣ ನಿಯಮಗಳು ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಸಿಸಿಐ ಕಡ್ಡಾಯಗೊಳಿಸಿದ್ದ ನಿಯಮದಂತೆ ಕೊಹ್ಲಿ ಅವರು ದೆಹಲಿ ತಂಡದ ಪರವಾಗಿ ವಿಜಯ್ ಹಜಾರೆ ಟ್ರೋಫಿ ದೇಶಿ ಟೂರ್ನಿಯಲ್ಲಿ ಭಾಗವಹಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಅಪಾರ ಜನಪ್ರಿಯತೆ ಹೊಂದಿದ್ದರೂ, ಮಂಡಳಿಯ ಒಳಗಿನ ಕೆಲವು ಬೆಳವಣಿಗೆಗಳು ಮತ್ತು ಪದೇ ಪದೇ ತಮ್ಮ ಅರ್ಹತೆಯನ್ನು ಪ್ರಶ್ನಿಸುವ ಧೋರಣೆ ಕೊಹ್ಲಿ ಅವರ ಕಿರಿಕಿರಿಗೆ ಕಾರಣವಾಗಿದೆ. “ಒಂದೋ ಮೊದಲ ದಿನವೇ ನಾನು ತಂಡಕ್ಕೆ ಅಗತ್ಯವಿಲ್ಲ ಎಂದು ನೇರವಾಗಿ ಹೇಳಿ, ಇಲ್ಲವೇ ನಾನು ಆಡುವಾಗ ಶಾಂತವಾಗಿರಿ” ಎಂದು ಹೇಳುವ ಮೂಲಕ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಕ್ರಿಕೆಟ್ನಿಂದ ಸಂಪೂರ್ಣವಾಗಿ ಹೊರನಡೆಯಲು ತಾವೀಗ ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂಬುದನ್ನು ಬಿಂಬಿಸಿದ್ದಾರೆ.
ಪ್ರಸ್ತುತ ಐಪಿಎಲ್ ಸರಣಿಯ ಪಂದ್ಯಗಳ ನಂತರವೂ ಕ್ರಿಕೆಟ್ ಬದುಕಿನ ಮುಕ್ತಾಯದ ಕುರಿತು ಸುಳಿವು ನೀಡಿದ್ದ ಚೇಸ್ ಮಾಸ್ಟರ್ ಕೊಹ್ಲಿ, ಎಲ್ಲದಕ್ಕೂ ಒಂದು ಫುಲ್ ಸ್ಟಾಪ್ ಇದ್ದೇ ಇರುತ್ತದೆ ಎಂದಿದ್ದರು. ತಾವು ಕೇವಲ ಅಂಕಿ-ಅಂಶಗಳು ಅಥವಾ ದಾಖಲೆಗಳಿಗಾಗಿ ಇನ್ನು ಮುಂದೆ ಕ್ರಿಕೆಟ್ ಆಡುತ್ತಿಲ್ಲ, ಕೇವಲ ಆಟದ ಮೇಲಿನ ಪ್ರೀತಿಗಾಗಿ ಆಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ವಿಶ್ವಕಪ್ನಂತಹ ಪ್ರತಿಷ್ಠಿತ ಸರಣಿಯಲ್ಲಿ ಕೊಹ್ಲಿ ಅಂತಹ ಅನುಭವಿ ಆಟಗಾರನ ಅನಿವಾರ್ಯತೆ ಭಾರತ ತಂಡಕ್ಕೆ ಇದ್ದರೂ, ಅವರ ಈ ಖಡಕ್ ಷರತ್ತುಗಳಿಗೆ ಬಿಸಿಸಿಐ ಹೇಗೆ ಪ್ರತಿಕ್ರಿಯಿಸಲಿದೆ ಮತ್ತು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇಡೀ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.



