
ಹೊಸದಿಲ್ಲಿ, ಜುಲೈ 15: ತಮ್ಮ ಕುಟುಂಬಕ್ಕೆ ಲಾಭ ಮಾಡಿಕೊಡಲು ಎಥನಾಲ್ ಮಿಶ್ರಿತ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದ್ದಾರೆ ಎಂಬ ಆರೋಪವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತೀವ್ರವಾಗಿ ತಳ್ಳಿಹಾಕಿದ್ದಾರೆ. ತಾನು ಮೊದಲಿನಿಂದಲೂ ದೇಶದಲ್ಲಿ ಪರ್ಯಾಯ ಇಂಧನಗಳ ಬಳಕೆಯನ್ನು ಬೆಂಬಲಿಸುತ್ತಾ ಬಂದಿರುವುದಾಗಿ ತಿಳಿಸಿರುವ ಅವರು, ಎಥನಾಲ್ ಮಿಶ್ರಿತ ಇಂಧನ ಬೇಡ ಎನ್ನುವ ಗ್ರಾಹಕರು ಹೆಚ್ಚಿನ ಬೆಲೆ ನೀಡಿ 100% ಶುದ್ಧ ಪೆಟ್ರೋಲ್ ಅನ್ನು ಖರೀದಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಎಲ್ಲಾ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಇವೆಲ್ಲವೂ ಕೇವಲ ಒಂದು ಅಪಪ್ರಚಾರದ ಅಭಿಯಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ವಾಹನ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಭಾರತದ ತೈಲ ಆಮದು ವೆಚ್ಚವನ್ನು ತಗ್ಗಿಸಲು ಪರ್ಯಾಯ ಇಂಧನಗಳನ್ನು ಬೆಂಬಲಿಸುತ್ತಿರುವುದಾಗಿ ವಿವರಿಸಿದ್ದಾರೆ. ತಮ್ಮ ಪುತ್ರರ ವ್ಯವಹಾರದಲ್ಲಿ ಎಥನಾಲ್ನ ಪಾಲು ಅತ್ಯಂತ ಕಡಿಮೆ ಇದ್ದು, ಒಟ್ಟು ಮಾರುಕಟ್ಟೆಗೆ ಅವರ ಕೊಡುಗೆ ತೀರಾ ನಗಣ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಒಟ್ಟಾರೆ ಎಥೆನಾಲ್ ಉದ್ಯಮವು ಪ್ರಸ್ತುತ 1,600 ಕೋಟಿ ರೂಪಾಯಿಗಳಷ್ಟು ಸಾಲದಲ್ಲಿದ್ದು, ಅದಕ್ಕೂ ತಮಗೂ ಯಾವುದೇ ವೈಯಕ್ತಿಕ ಸಂಬಂಧವಿಲ್ಲ ಹಾಗೂ ಎಥನಾಲ್ ಬೆಲೆ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ನಿಶ್ಚಿತವಾಗಿ ಹೇಳಿದರು.
ಎಥನಾಲ್ ಮಿಶ್ರಣ ಕಾರ್ಯಕ್ರಮವು ಈಗಿನದಲ್ಲ, ಇದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲೇ ಆರಂಭವಾಗಿತ್ತು ಮತ್ತು ನಂತರದ ಯುಪಿಎ ಆಡಳಿತವೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು ಎಂದು ಗಡ್ಕರಿ ನೆನಪಿಸಿದರು. ಕೇವಲ ಕಬ್ಬಿನಿಂದ ತಯಾರಿಸುವ ಎಥನಾಲ್ ಮಾತ್ರವಲ್ಲದೆ ಮೆಕ್ಕೆಜೋಳ, ಕೃಷಿ ತ್ಯಾಜ್ಯ ಮತ್ತು ಬಿದಿರಿನಿಂದ ತಯಾರಿಸುವ ಎಥನಾಲ್ ಅನ್ನು ಕೂಡ ತಾವು ಸಮಾನವಾಗಿ ಉತ್ತೇಜಿಸುತ್ತಿರುವುದಾಗಿ ಹೇಳಿದರು. ಇದರೊಂದಿಗೆ ಮೆಥನಾಲ್, ಹೈಡ್ರೋಜನ್ ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಪರಿಸರ ಸ್ನೇಹಿಯಾದ ಎಲ್ಲಾ ರೀತಿಯ ಪರ್ಯಾಯ ಇಂಧನ ಮೂಲಗಳಿಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.
E20 ಇಂಧನವು ವಾಹನಗಳ ಇಂಜಿನ್ ಗಳನ್ನು ಹಾಳುಮಾಡುತ್ತದೆ ಎಂಬ ಸಾರ್ವಜನಿಕ ಆತಂಕ ಮತ್ತು ಅಪಪ್ರಚಾರಗಳನ್ನು ಸಚಿವರು ನಿರಾಕರಿಸಿದರು. E10 ಇಂಧನಕ್ಕೆ ಪೂರಕವಾಗಿರುವ ಎಲ್ಲಾ ವಾಹನಗಳು E20 ಇಂಧನವನ್ನು ಬಳಸಲು ಸಂಪೂರ್ಣ ಅರ್ಹವಾಗಿದ್ದು, ಇಂಧನದಿಂದ ಇಂಜಿನ್ ಹಾಳಾಗಿದೆ ಎಂಬ ಬಗ್ಗೆ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದರು. ಈಗಾಗಲೇ ದೇಶದಲ್ಲಿ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದ್ದು, ಪ್ರತಿ ಇಂಧನ ಕೇಂದ್ರದಲ್ಲೂ E20 ಇಂಧನ ಲಭ್ಯವಿರುವುದರಿಂದ ಪ್ರತ್ಯೇಕವಾಗಿ E10 ನೀಡಲು ಸಾಧ್ಯವಿಲ್ಲ, ಹಾಗಾಗಿ ಪರ್ಯಾಯ ಬಯಸುವವರು ಹೆಚ್ಚಿನ ಬೆಲೆ ನೀಡಿ ಶುದ್ಧ ಪೆಟ್ರೋಲ್ ಪಡೆಯಬಹುದು ಎಂದು ಸಚಿವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.



