
ಚೆನ್ನೈ, ಆಗಸ್ಟ್ 31: ತಮಿಳುನಾಡು ರಾಜಕಾರಣದಲ್ಲಿ ‘ವಿಜಯ್ ಮುಂದಿನ ಪ್ರಧಾನಿ’ ಎಂಬ ಕೂಗು ಇದೀಗ ಆಡಳಿತಾರೂಢ ಮೈತ್ರಿಕೂಟದೊಳಗೇ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಟಿವಿಕೆ ನಾಯಕ ವಿಜಯ್ ಅವರನ್ನು 2029ರ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸದಿದ್ದರೆ ಕಾಂಗ್ರೆಸ್ನ ಸಚಿವರು ಸಂಪುಟದಿಂದ ಹೊರಬರುವ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡು ಪ್ರವಾಸೋದ್ಯಮ ಸಚಿವ ಎಸ್. ರಾಜೇಶ್ ಕುಮಾರ್ ಅವರು, ಟಿವಿಕೆ 2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ತಾವು ಹಾಗೂ ತಮ್ಮ ಸಂಪುಟ ಸಹೋದ್ಯೋಗಿ ಪಿ. ವಿಶ್ವನಾಥನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ. ಈ ಬೆಳವಣಿಗೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ನೊಂದಿಗೆ ಇರುವ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದರ ಬೆನ್ನಲ್ಲೇ ‘ವಿಜಯ್ ಫಾರ್ ಪಿಎಂ’ ಅಭಿಯಾನದ ಕುರಿತು ಡಿಎಂಕೆ ಕೂಡ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಪ್ರಧಾನಿ ಹುದ್ದೆಯ ಆಯ್ಕೆಯಾಗಿ ವಿಜಯ್ ಮೂರನೇ ಸ್ಥಾನದಲ್ಲಿದ್ದಾರೆ ಎಂಬ ವರದಿಯನ್ನು ಆಧರಿಸಿ ಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ರಾಷ್ಟ್ರಮಟ್ಟದ ನಾಯಕನಾಗಿ ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮತ್ತು ಡಿಎಂಕೆ ಎರಡೂ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.
2029ರ ಲೋಕಸಭಾ ಚುನಾವಣೆ ಇನ್ನೂ ದೂರವಿದ್ದರೂ, ಪ್ರಧಾನಿ ಅಭ್ಯರ್ಥಿ ವಿಚಾರ ತಮಿಳುನಾಡಿನ ರಾಜಕೀಯದಲ್ಲಿ ಈಗಲೇ ಕಾವು ಪಡೆದುಕೊಂಡಿದೆ. ಒಂದು ಕಡೆ ವಿಜಯ್ ಅವರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಮುಂದಿಟ್ಟುಕೊಂಡಿದೆ. ಹೀಗಾಗಿ ಈ ಭಿನ್ನಾಭಿಪ್ರಾಯ ಮುಂದಿನ ದಿನಗಳಲ್ಲಿ ವಿಜಯ್ ನೇತೃತ್ವದ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.



