ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಇಂದು ಸಂಜೆ ಲೋಕಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಂತೆ ಪ್ರಮುಖ ನಾಯಕರು ಸಂಪುಟ ಸೇರಲಿದ್ದು, ಸಚಿವ ಸ್ಥಾನಕ್ಕಾಗಿ ನಡೆದ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ. ನೂತನ ಸಚಿವರ ಅಧಿಕಾರ ಸ್ವೀಕಾರದ ಬಳಿಕವೇ ಅಧಿಕೃತ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

ಮುಖ್ಯಾಂಶಗಳು
- ಇಂದು ಸಂಜೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.
- ಸಂಪುಟ ವಿಸ್ತರಣೆಯ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ.
- ನೂತನ ಸಚಿವರಿಗೆ ಪ್ರಮಾಣವಚನ ಬೋಧನೆ
ಬೆಂಗಳೂರು, ಆಗಸ್ಟ್ 03: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಒಂದೆಡೆ ಕಾವೇರಿ ನದಿ ನೀರು ಹಂಚಿಕೆ ಹಾಗೂ ಪ್ರವಾಹದ ತೀವ್ರ ಸಂಕಷ್ಟ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ, ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹಾಗೂ ದೆಹಲಿ ಮಟ್ಟದ ಸರಣಿ ಸಭೆಗಳು ಕೂಡ ಸಮಾನಾಂತರವಾಗಿ ತೀವ್ರ ಕುತೂಹಲ ಕೆರಳಿಸಿದ್ದವು. ಇದೀಗ ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ತಂಗಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.
ಶಾಸಕರ ನಡುವೆ ಭಾರೀ ಪೈಪೋಟಿ
ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ನಾಯಕರ ಹೆಸರುಗಳು ತೀವ್ರ ಚರ್ಚೆಯಲ್ಲಿತ್ತು. ಇವರಲ್ಲಿ ಕೆಲವರು ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಮತ್ತೆ ಸಂಪುಟ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ಭಿನ್ನಮತ ಶಮನಗೊಳಿಸುವ ವಿಚಾರದಲ್ಲಿ ಶಾಸಕರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನಕ್ಕೆ ಮೌಖಿಕ ಮಾಹಿತಿ ನೀಡಲಾಗಿದೆಯಾದರೂ, ಇದುವರೆಗೆ ಲಿಖಿತವಾಗಿ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ ಎನ್ನಲಾಗಿತ್ತು. ಆದರೀಗ ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ ಹೊರಬಿದ್ದಿದೆ.
ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ
- ಪಿಎಂ ನಾರಾಯಣ ಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಟಿ. ರಘುಮೂರ್ತಿ
- ಬಿ ನಾಗೇಂದ್ರ
- ಜಮೀರ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುಟ್ಟರಂಗ ಶೆಟ್ಟಿ
- ಮಂಕಾಳ್ ವೈದ್ಯ
- ಅಜಯ್ ಸಿಂಗ್
- ಚೆಲುವರಾಯಸ್ವಾಮಿ
- ಎಂ ಶಿವಲಿಂಗೇಗೌಡ
- ಹೆಚ್ ಸಿ ಬಾಲಕೃಷ್ಣ
- ಶಾಂತವೀರೇಗೌಡ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ್ ಸವದಿ
- ಬಸವರಾಜ್ ರಾಯರೆಡ್ಡಿ
ಕೊನೆಗೂ ಸಂಪುಟ ವಿಸ್ತರಣೆಯ ಸುದೀರ್ಘ ಚರ್ಚೆಗಳಿಗೆ ತೆರೆ ಬಿದ್ದಿದ್ದು, ನೂತನ ಸಚಿವರ ಪ್ರಮಾಣವಚನದತ್ತ ಎಲ್ಲರ ಕಣ್ಣು ನೆಟ್ಟಿದೆ. ಹೊಸ ಸಚಿವರ ಅಧಿಕಾರ ಸ್ವೀಕಾರದ ನಂತರವಷ್ಟೇ ಖಾತೆ ಹಂಚಿಕೆ ಹಾಗೂ ರಾಜ್ಯದ ಆಡಳಿತ ಯಂತ್ರಕ್ಕೆ ಹೊಸ ವೇಗ ಸಿಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ.




