ಅಕ್ಷಯ್ ಕುಮಾರ್ ಮಗಳು ನಿತಾರಾ ಆನ್ಲೈನ್ ಗೇಮ್ ಆಡುವಾಗ ಬೆತ್ತಲೆ ಫೋಟೋ ಕಳುಹಿಸುವಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಈ ಕುರಿತು ಕುಟುಂಬ ದೂರು ನೀಡಿದ ನಂತರ ಮಹಾರಾಷ್ಟ್ರ ಸೈಬರ್ ವಿಭಾಗ ಅಪರಾಧಿಯನ್ನು ಬಂಧಿಸಿದೆ. ಆನ್ಲೈನ್ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ವಿರುದ್ಧ ಪೊಲೀಸರ ಕ್ರಮದ ಅಗತ್ಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಸೈಬರ್ ಜಾಗೃತಿ ಅತಿ ಮುಖ್ಯ.

ಸೋಶಿಯಲ್ ಮೀಡಿಯಾದಲ್ಲಿ ನೀಡುವ ಕಿರುಕುಳವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡುವ ಕೆಲಸ ಆಗುತ್ತಿದೆ. ಇಷ್ಟಾದರೂ ಅನೇಕರಿಗೆ ಬುದ್ಧಿ ಬಂದಿಲ್ಲ. ಅಕ್ಷಯ್ ಕುಮಾರ್ ಮಗಳು ನಿತಾರಾ ಕುಮಾರ್ಗೆ ಬೆತ್ತಲೆ ಫೋಟೋ ಕಳಿಸುವಂತೆ ವ್ಯಕ್ತಿಯೋರ್ವ ಕೇಳಿದ್ದ. ಆತನನ್ನು ಹುಡುಕಿ ಬಂಧಿಸುವ ಕೆಲಸ ಆಗಿದೆ. ಈ ಬಗ್ಗೆ ಮಹಾರಾಷ್ಟ್ರ ಸೈಬರ್ ವಿಭಾಗದವರು ಮಾಹಿತಿ ನೀಡಿದ್ದಾರೆ.
ನಿತಾರಾ ಕುಮಾರ್ ಅವರು ಆನ್ಲೈನ್ ಅಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ ನಿತಾರಾ ಬಳಿ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ನಿತಾರಾ ಕುಟುಂಬದ ಗಮನಕ್ಕೆ ತಂದಿದ್ದರು. ಅವರು ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರಿನ ಅನ್ವಯ ಓರ್ವನ ಬಂಧನ ಆಗಿದೆ. ಮಹಾರಾಷ್ಟ್ರ ಸೈಬರ್ ವಿಭಾಗ ಮುಂಬೈನ ಆರ್.ಡಿ. ನ್ಯಾಷನಲ್ ಕಾಲೇಜಿನಲ್ಲಿ ಸೈಬರ್ ಜಾಗೃತಿಗಾಗಿ ವಿಶೇಷ ಅಧಿವೇಶನವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲಿ ಆಗಿದೆ. ಈ ಈವೆಂಟ್ನಲ್ಲಿ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಆನ್ಲೈನ್ ಅಲ್ಲಿ ಕಿರುಕುಳ ನೀಡುವವರು ಅಕ್ಷಯ್ ಕುಮಾರ್ ಮಗಳನ್ನು ಬಿಟ್ಟಿರಲಿಲ್ಲ.
‘ಅಕ್ಷಯ್ ಕುಮಾರ್ ನಮ್ಮ ಜೊತೆ ಒಂದು ಶಾಕಿಂಗ್ ಸುದ್ದಿ ಹೇಳಿದ್ದರು. ಮಗಳಿಗೆ ಆದ ಸೈಬರ್ ಕಿರುಕುಳದ ಬಗ್ಗೆ ಅವರು ವಿವರಿಸಿದ್ದರು. ಆ ಹುಡುಗಿ ತುಂಬಾ ಧೈರ್ಯಶಾಲಿಯಾಗಿದ್ದಳು. ಹೀಗಾಗಿ ಈ ವಿಷಯವನ್ನು ಹೆತ್ತವರಿಗೆ ತಿಳಿಸಿದಳು. ಅವರು ನಮಗೆ ದೂರು ನೀಡಿದರು’ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದ್ದಾರೆ. ಈ ವೇಳೆ ಅಕ್ಷಯ್ ವಿವರಿಸಿದ ಘಟನಯನ್ನು ಯಶಸ್ವಿ ಯಾದವ್ ತೋರಿಸಿದ್ದಾರೆ.
‘ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯ ಬಗ್ಗೆ ನಿಮಗೆ ಹೇಳಬೇಕು. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಅಪರಿತ ವ್ಯಕ್ತಿ ಇವಳಿಗೆ ಎದುರಾದ. ನೀವು ಚೆನ್ನಾಗಿ ಆಡುತ್ತೀರಾ ಎಂದೇನಾದರೂ ಹೇಳಬಹುದು. ಆದರೆ, ಆತ ನಿಮ್ಮದು ಯಾವ ಊರು ಎಂದು ಕೇಳಿದ. ಇದಕ್ಕೆ ಆಕೆ ಮುಂಬೈ ಎಂದಳು. ಅವನು ಸಾಮಾನ್ಯರಂತೆ ಮಾತನಾಡುತ್ತಿದ್ದ’ ಎಂದು ಅಕ್ಷಯ್
‘ನೀವು ಹುಡುಗನೋ ಅಥವಾ ಹುಡುಗಿಯೋ ಎಂಬ ಪ್ರಶ್ನೆ ಬಂತು. ನನ್ನ ಮಗಳು ಹುಡುಗಿ ಎಂದು ಉತ್ತರಿಸಿದಳು. ‘ನಿಮ್ಮ ನಗ್ನ ಚಿತ್ರವನ್ನು ನನಗೆ ಕಳುಹಿಸಬಹುದೇ?’ ಎಂಬ ಸಂದೇಶವನ್ನು ಆತ ಕಳುಹಿಸಿದನು. ನನ್ನ ಮಗಳು, ಎಲ್ಲವನ್ನೂ ಆಫ್ ಮಾಡಿದಳು. ಅವಳು ಹೋಗಿ ನನ್ನ ಹೆಂಡತಿಗೆ (ಟ್ವಿಂಕಲ್ ಖನ್ನಾ) ಈ ವಿಷಯ ಹೇಳಿದಳು’ ಎಂದು ಅಕ್ಷಯ್ ವಿವರಿಸಿದ್ದರು. ಈ ಪ್ರಕರಣ ಸೈಬರ್ ಠಾಣೆಗೆ ಬಂದಿತ್ತು. ಈ ಸಂಬಂಧ ಓರ್ವನ ಬಂಧನ ಆಯಿತು.




