
ಛತ್ರಪತಿ ಸಂಭಾಜಿನಗರ, ಆಗಸ್ಟ್ 21: ಐಫೋನ್ನ ಕಂತು ಪಾವತಿಸುವ ವಿಚಾರವಾಗಿ ತಂದೆಯೊಂದಿಗೆ ನಡೆದ ಜಗಳದ ಬಳಿಕ ಬೆಟ್ಟ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ 18 ವರ್ಷದ ಯುವಕ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಟಿಸ್ಗಾಂವ್ ಪ್ರದೇಶದಲ್ಲಿ ನಡೆದಿದೆ.
ಕುನಾಲ್ ಎಂಬ ಯುವಕ ಐಫೋನ್ ಖರೀದಿಸಿದ್ದರೂ ಅದರ ಕಂತುಗಳನ್ನು ಪಾವತಿಸಲು ಕುಟುಂಬದವರಿಂದ ಹಣ ಕೇಳುತ್ತಿದ್ದ ಎನ್ನಲಾಗಿದೆ. ಇತ್ತೀಚಿನ EMI ಪಾವತಿ ವಿಚಾರವಾಗಿ ತಂದೆ ಮುರಳೀಧರ್ ಚಂದಗುಡೆ ಅವರೊಂದಿಗೆ ವಾಗ್ವಾದ ನಡೆದ ಬಳಿಕ ಕುನಾಲ್ ಮನೆಯಿಂದ ಹೊರಟು ಸಮೀಪದ ಬೆಟ್ಟಕ್ಕೆ ತೆರಳಿ, ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದು ತಂದೆ-ತಾಯಿ, ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.
ಸ್ಥಳೀಯರು ಆತನಿಗೆ ಕೆಳಗೆ ಬರುವಂತೆ ಮನವಿ ಮಾಡಿದ್ದಲ್ಲದೆ, ಐಫೋನ್ ಕೊಡಿಸುವುದಾಗಿಯೂ ಭರವಸೆ ನೀಡಿದ್ದರು. ಆದರೆ ಆತ ಕೆಳಗೆ ಬರಲು ಒಪ್ಪಲಿಲ್ಲ. ಕೊನೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಂದೆ ಮಗನ ಬಳಿಗೆ ತೆರಳಿ ಆತನನ್ನು ಅಪಾಯದ ಅಂಚಿನಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸಿದಾಗ ಇಬ್ಬರೂ ಸಮತೋಲನ ಕಳೆದುಕೊಂಡು ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ. ಪತಿ ಮತ್ತು ಮಗ ಬಿದ್ದಿರುವುದನ್ನು ಕಂಡ ತಾಯಿ ಸಂಗೀತಾ ಅವರೂ ಬೆಟ್ಟದಿಂದ ಜಿಗಿದು ಮೃತಪಟ್ಟಿದ್ದಾರೆ.
ಮೂವರ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಐಫೋನ್ EMI ಕುರಿತ ವಿವಾದವೇ ಘಟನೆಯ ತಕ್ಷಣದ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯುವಕನ ಈ ನಿರ್ಧಾರದ ಹಿಂದೆ ಬೇರೆ ಯಾವುದೇ ಕಾರಣಗಳಿದ್ದವೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಘಟನೆ ದುಬಾರಿ ವಸ್ತುಗಳ ಮೇಲಿನ ಒತ್ತಡ, ಕುಟುಂಬದೊಳಗಿನ ಸಂವಹನ ಮತ್ತು ಯುವಜನರ ಭಾವನಾತ್ಮಕ ಸಂಕಷ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



