
ಜೂನ್ 27.2026 : ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಇತ್ತೀಚಿನ ಚಿತ್ರ ‘ಭಾರತ ಭಾಗ್ಯ ವಿಧಾತ’ ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದೆ. ಜೂನ್ 2026 ರಲ್ಲಿ ಬಿಡುಗಡೆಯಾದ ಈ ಚಿತ್ರವು ದೇಶದ ಭಾಗ್ಯವನ್ನೇ ಬದಲಾಯಿಸುವ ಕಥಾಹಂದರವನ್ನು ಹೊಂದಿದೆ ಎಂದು ಭಾರಿ ಪ್ರಚಾರ ಪಡೆದಿತ್ತಾದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಈ ಚಿತ್ರದ ಸೋಲಿನೊಂದಿಗೆ ಕಂಗನಾ ರಣಾವತ್ ಅವರ ವೃತ್ತಿಜೀವನದಲ್ಲಿ ಸತತ ಎಂಟು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿವೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ಥಿಯೇಟರ್ಗಳಿಗೆ ಪ್ರೇಕ್ಷಕರು ಬಾರದ ಕಾರಣ ಮೊದಲ ವಾರದಲ್ಲಿ ಕೇವಲ ಐದರಿಂದ ಆರು ಕೋಟಿ ರೂಪಾಯಿಗಳ ಗಳಿಕೆಗೆ ಮಾತ್ರ ಸೀಮಿತವಾಗಿದೆ.
ಕಂಗನಾ ಅವರು ಬಿಜೆಪಿ ಸಂಸದೆಯಾಗಿ ರಾಜಕೀಯದಲ್ಲಿ ಸಕ್ರಿಯರಾದ ನಂತರ, ಅವರ ವಿವಾದಾತ್ಮಕ ಹೇಳಿಕೆಗಳು ಮತ್ತು ಚಿತ್ರಗಳ ವಿಷಯಗಳ ಆಯ್ಕೆಯು ಪ್ರೇಕ್ಷಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಟನೆಯನ್ನು ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ನೋಡುವುದು ಪ್ರೇಕ್ಷಕರಿಗೆ ಕಷ್ಟವಾಗುತ್ತಿದ್ದು, ಅವರ ಚಿತ್ರಗಳು ಪ್ರಚಾರದ ಸಾಧನಗಳಂತೆ ಭಾಸವಾಗುತ್ತಿರುವುದು ಜನರನ್ನು ಚಿತ್ರಮಂದಿರಗಳಿಂದ ದೂರ ಸರಿಯುವಂತೆ ಮಾಡಿದೆ.
ಈ ಹಿಂದೆ ಬಿಡುಗಡೆಯಾದ ಎಮರ್ಜೆನ್ಸಿ, ತೇಜಸ್, ಚಂದ್ರಮುಖಿ-2, ಧಾಕಡ್, ತಲೈವಿ, ಪಂಗ ಮತ್ತು ಜಡ್ಜ್ಮೆಂಟಲ್ ಹೈ ಕೆಯಂತಹ ಚಿತ್ರಗಳು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋಲನ್ನಪ್ಪಿವೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ, ತಮ್ಮ ವೃತ್ತಿಜೀವನದ ಈ ಸತತ ಸೋಲುಗಳ ಸರಣಿಯಿಂದ ಹೊರಬರಲು ಕಥೆಗಳ ಆಯ್ಕೆ ಮತ್ತು ನಿರೂಪಣೆಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ ಎಂದು ಚಿತ್ರರಂಗದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



