ಬಾಲಿವುಡ್ ಖಾನ್ಗಳು ಸಿನಿಮಾ ಯಶಸ್ಸಿಗೆ ದಕ್ಷಿಣ ಭಾರತದ ನಿರ್ದೇಶಕರನ್ನು ಆಶ್ರಯಿಸುತ್ತಿದ್ದಾರೆ. ಶಾರುಖ್ ಖಾನ್ ಈಗಾಗಲೇ ಅಟ್ಲಿ ಜೊತೆ ಸಿನಿಮಾ ಮಾಡಿ ಗೆದ್ದಿದ್ದಾರೆ. ಆಮಿರ್ ಖಾನ್ ಮುಂದಿನ ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಲಿದ್ದಾರೆ. ಇದೀಗ ಸಲ್ಮಾನ್ ಖಾನ್, ಮಲಯಾಳಂನ ಪ್ರತಿಭಾವಂತ ನಿರ್ದೇಶಕರೊಟ್ಟಿಗೆ ಕೈ ಜೋಡಿಸಲು ಮುಂದಾಗಿದ್ದಾರೆ

ಬಾಲಿವುಡ್ (Bollywood) ನಟರು ಯಶಸ್ಸಿಗಾಗಿ ದಕ್ಷಿಣ ಭಾರತ ಸಿನಿಮಾ ನಿರ್ದೇಶಕರ ಬೆನ್ನು ಬಿದ್ದಿದ್ದಾರೆ. ಶಾರುಖ್ ಖಾನ್, ಅಟ್ಲಿ ಜೊತೆ ಕೈಜೋಡಿಸಿ ‘ಜವಾನ್’ ಸಿನಿಮಾ ಮೂಲಕ ಭಾರಿ ದೊಡ್ಡ ಯಶಸ್ಸು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಅದೇ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಆದರೆ ಸತತ ಸೋಲು ಕಾಣುತ್ತಲೇ ಬರುತ್ತಿರುವ ಸಲ್ಮಾನ್ ಖಾನ್, ತಮಿಳಿನ ಮುರುಗದಾಸ್ ಜೊತೆ ಕೈಜೋಡಿಸಿ ‘ಸಿಖಂಧರ್’ ಸಿನಿಮಾ ಮಾಡಿದ್ದರು. ಆದರೆ ಅದು ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಇದೀಗ ಮಲಯಾಳಂನ ಪ್ರತಿಭಾವಂತ ಸಿನಿಮಾ ನಿರ್ದೇಶಕನ ಜೊತೆಗೆ ಕೈಜೋಡಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ ‘ಟೇಕ್ ಆಫ್’, ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯವಾದ ‘ಸಿ ಯು ಸೂನ್‘, ಫಹಾದ್ ಫಾಸಿಲ್ ನಟನೆಯ ಗ್ಯಾಂಗ್ಸ್ಟರ್ ಸಿನಿಮಾ ‘ಮಾಲಿಕ್’, ಕುಂಚಕ್ಕೊ ಬೋಬನ್ ನಟನೆಯ ಸೂಕ್ಷ್ಮ ಕಥಾವಸ್ತುವಿನ ಸಿನಿಮಾ ‘ಅರಿಯಿಪ್ಪು’ ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಮತ್ತು ಸಂಕಲನಕಾರರೂ ಆಗಿರುವ ಮಹೇಶ್ ನಾರಾಯಣನ್ ಅವರು ಸಲ್ಮಾನ್ ಖಾನ್ ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಮಹೇಶ್ ನಾರಾಯಣನ್ ಪಾಲಿಗೆ ಇದು ಮೊದಲ ಹಿಂದಿ ಸಿನಿಮಾ ಆಗಲಿದೆ. ಈ ಹಿಂದೆ ಅವರು ‘ಫ್ಯಾಂಟಮ್ ಹಾಸ್ಪಿಟಲ್’ ಹೆಸರಿನ ಹಿಂದಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು ಆದರೆ ಕೆಲವು ಕಾರಣಗಳಿಗಾಗಿ ಆ ಸಿನಿಮಾ ಸೆಟ್ಟೇರಲಿಲ್ಲ. ಆದರೆ ಈಗ ಸಲ್ಮಾನ್ ಖಾನ್ ಜೊತೆಗೆ ಐತಿಹಾಸಿಕ ಹಿನ್ನೆಲೆಯ ಕತೆಯುಳ್ಳ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾದ ಕತೆ 1970 ರಿಂದ 1990 ರ ಕಾಲಘಟ್ಟದ್ದಾಗಿರಲಿದೆ.
ಕಳೆದ ಕೆಲ ವರ್ಷಗಳಲ್ಲಿ ಕೇವಲ ಪಕ್ಕಾ ಮಾಸ್ ಮಸಾಲ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಾ ಬಂದಿರುವ ಸಲ್ಮಾನ್ ಖಾನ್ ಅಚಾನಕ್ಕಾಗಿ ತಮ್ಮ ಶೈಲಿ ಬದಲಾಯಿಸಿಕೊಂಡಿದ್ದಾರೆ. ಪ್ರಸ್ತುತ ಅವರು ‘ಘಲವಾನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಇಂಡೋ-ಚೀನಾ ಸೈನಿಕರ ನಡುವೆ ನಡೆದ ಗಲಭೆಯ ಘಟನೆಯನ್ನು ಈ ಸಿನಿಮಾ ಆಧರಿಸಿದೆ. ಸಿನಿಮಾನಲ್ಲಿ ಆರ್ಮಿ ಮೇಜರ್ ಪಾತ್ರದಲ್ಲಿ ಸಲ್ಮಾನ್ ಖಾನ್ ನಿರ್ವಹಿಸಿದ್ದಾರೆ. ಇನ್ನು ಕಬೀರ್ ಖಾನ್ ಅವರೊಟ್ಟಿಗೂ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದು ‘ಭಜರಂಗಿ ಭಾಯಿಜಾನ್ 2’ ಸಿನಿಮಾಕ್ಕಾಗಿ ಈ ಜೋಡಿ ಮತ್ತೆ ಒಂದಾಗಲಿದೆ.




