
ಮುಂಬೈ :ವೆಬ್ ಸೀರೀಸ್ಗೆ ಆಡಿಷನ್ ನಡೆಸಲಾಗುತ್ತಿದೆ ಎಂದು 17 ಮಕ್ಕಳನ್ನು ಕರೆಸಿದ್ದ ರೋಹಿತ್ ಆರ್ಯ ಎಂಬ ವ್ಯಕ್ತಿ ಮುಂಬೈನ (Mumbai) ಆರ್ಎಸ್ ಸ್ಟುಡಿಯೋದಲ್ಲಿ ಆ ಮಕ್ಕಳು ಮತ್ತು ಇನ್ನಿಬ್ಬರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ನಂತರ ಪೊಲೀಸರಿಗೆ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಕೊನೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆ ಎಲ್ಲ ಮಕ್ಕಳನ್ನು ರಕ್ಷಿಸಿದ್ದರು. ಆದರೆ, ರೋಹಿತ್ ಆರ್ಯನ ಮೇಲೆ ಗುಂಡು ಹಾರಿಸಲಾಗಿದೆ.
ಎನ್ಕೌಂಟರ್ನಲ್ಲಿ ಸಾವನ್ನಪ್ಪುವ ಮೂಲಕ ಈ ಕಿಡ್ನಾಪ್ ಡ್ರಾಮಾ ಅಂತ್ಯ ಕಂಡಿದೆ. ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಮುಂಬೈನ ಪೊವೈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರ್ಎ ಸ್ಟುಡಿಯೋ ಒಳಗೆ 17 ಮಕ್ಕಳು ಸೇರಿದಂತೆ ಒಟ್ಟು 19 ಜನರನ್ನು ಒತ್ತೆಯಾಳಾಗಿರಿಸಿದ್ದ ರೋಹಿತ್ ಅವರನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು.
ನಂತರ ರೋಹಿತ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೊದಲು ಮಕ್ಕಳನ್ನು ಕಾಪಾಡಲು ಸ್ಟುಡಿಯೋದ ಬಾತ್ರೂಂ ಮೂಲಕ ಆರ್ಎ ಸ್ಟುಡಿಯೋವನ್ನು ಪ್ರವೇಶಿಸಿದ್ದರು. ಈ ವೇಳೆ ಆರೋಪಿ ರೋಹಿತ್ ಆರ್ಯ ಏರ್ ಗನ್ ಹಿಡಿದು ನಿಂತಿದ್ದರು. ಅಲ್ಲದೆ, ಅವರ ಬಳಿ ಕೆಲವು ರಾಸಾಯನಿಕ ವಸ್ತುಗಳು ಕೂಡ ಇದ್ದವು. ಪೊಲೀಸ್ ಅಧಿಕಾರಿಗಳು ಪದೇ ಪದೇ ಶರಣಾಗುವಂತೆ ಆತನಿಗೆ ಸೂಚಿಸಿದ್ದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ. ಶೂಟ್ ಮಾಡುವುದಾಗಿಯೂ ಪೊಲೀಸರು ಹೆದರಿಸಿದ್ದರು. ಅದಕ್ಕೂ ಆತ ಬಗ್ಗಲಿಲ್ಲ.

ಬೇರೆ ದಾರಿಯಿಲ್ಲದೆ ರೋಹಿತ್ ಆರ್ಯನಿಂದ ಮಕ್ಕಳ ಜೀವಕ್ಕೆ ಅಪಾಯವಾಗಬಹುದು ಎಂದು ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಜೋಗೇಶ್ವರಿ ಟ್ರಾಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.




