
ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮಹಾಭಾರತ ಕಾಲದ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ನಗರದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆ. ಇದರೊಂದಿಗೆ, ಹಳೆ ದಿಲ್ಲಿ ರೈಲ್ವೆ ನಿಲ್ದಾಣ ಮತ್ತು ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಹೆಸರುಗಳನ್ನು ಬದಲಾಯಿಸುವಂತೆ ಅವರು ಆಗ್ರಹಿಸಿದ್ದಾರೆ.
ಹೊಸದಿಲ್ಲಿ: ರಾಷ್ಟ್ರ ರಾಜಧಾನಿದಿಲ್ಲಿಗೆ ‘ಇಂದ್ರಪ್ರಸ್ಥ’ ಎಂದು ಮರುನಾಮಕರಣ ಮಾಡಬೇಕು ಎಂದು ದಿಲ್ಲಿಯ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ನಗರದ ಪ್ರಾಚೀನ ಪರಂಪರೆಯು ಪಾಂಡವರ ಕಾಲಕ್ಕೆ ಸೇರಿದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಹೆಸರು ಬದಲಾವಣೆ ಮಾಡುವುದು ಸೂಕ್ತ ಎಂದು ಅವರು ಪ್ರತಿಪಾದಿಸಿದ್ದಾರೆ
ಕೇವಲ ದಿಲ್ಲಿಯ ಹೆಸರನ್ನು ಬದಲಿಸುವುದು ಮಾತ್ರವಲ್ಲದೆ, ಹಳೆ ದಿಲ್ಲಿ ರೈಲ್ವೆ ನಿಲ್ದಾಣವನ್ನು ‘ಇಂದ್ರಪ್ರಸ್ಥ ಜಂಕ್ಷನ್’ ಎಂದೂ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ‘ಇಂದ್ರಪ್ರಸ್ಥ ವಿಮಾನ ನಿಲ್ದಾಣ’ ಎಂದೂ ಮರುನಾಮಕರಣ ಮಾಡಬೇಕೆಂದು ಅವರು ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ.
“ದಿಲ್ಲಿಯ ಇತಿಹಾಸವು ಪಾಂಡವರ ಯುಗಕ್ಕೆ ನೇರವಾಗಿ ಸಂಬಂಧಿಸಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ದಿಲ್ಲಿಯ ಭವ್ಯ ಸಂಸ್ಕೃತಿ, ನಾಗರಿಕತೆ, ಪರಂಪರೆ ಮತ್ತು ಸಂಪ್ರದಾಯಗಳು ಇಂದ್ರಪ್ರಸ್ಥ ಎಂಬ ಹೆಸರಿನೊಂದಿಗೆ ಬೆಸೆದುಕೊಂಡಿವೆ. ದಿಲ್ಲಿಗೆ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡಿದರೆ, ಅದು ನಮ್ಮ ಹೆಮ್ಮೆಯ ಸಂಪ್ರದಾಯಗಳ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ,” ಎಂದು ಖಂಡೇಲ್ವಾಲ್ ಪತ್ರದಲ್ಲಿ ವಿವರಿಸಿದ್ದಾರೆ
ನಗರದ ವಿವಿಧ ಸ್ಥಳಗಳಲ್ಲಿ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸುವಂತೆಯೂ ಅವರು ಕೋರಿದ್ದು, ಇದರಿಂದ ಯುವ ಪೀಳಿಗೆಯು ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾಭಾರತದ ಕಾಲದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ತಮ್ಮ ರಾಜಧಾನಿ ‘ಇಂದ್ರಪ್ರಸ್ಥ’ವನ್ನು ಸ್ಥಾಪಿಸಿದ್ದರು. ಅದು ತತ್ವಗಳು ಮತ್ತು ನೈತಿಕತೆಯನ್ನು ಆಧರಿಸಿದ ಆಡಳಿತವನ್ನು ಸಂಕೇತಿಸುವ ಸಮೃದ್ಧ, ಸುಸಜ್ಜಿತ ನಗರವಾಗಿತ್ತು. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಯಿದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಮಾಡುವುದು ದಿಲ್ಲಿಗೆ ಐತಿಹಾಸಿಕ ನ್ಯಾಯವನ್ನು ಒದಗಿಸುತ್ತದೆ ಎಂದು ಅವರು ವಾದಿಸಿದ್ದಾರೆ
ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್ರಾಜ್ನಂತಹ ನಗರಗಳು ತಮ್ಮ ಐತಿಹಾಸಿಕ ಅಸ್ಮಿತೆಯನ್ನು ಮರಳಿ ಪಡೆದಂತೆ, ದಿಲ್ಲಿಯು ತನ್ನ ಮೂಲ ಹೆಸರನ್ನು ಮರಳಿ ಪಡೆಯಬೇಕು. ‘ಇಂದ್ರಪ್ರಸ್ಥ’ ಎಂಬ ಹೆಸರು ನಮ್ಮ ಭವ್ಯ ಪರಂಪರೆ, ನೀತಿಬದ್ಧ ಆಡಳಿತ ಮತ್ತು ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಈ ಬದಲಾವಣೆಯು ರಾಷ್ಟ್ರೀಯ ಹೆಮ್ಮೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಈ ಕ್ರಮವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರವಾಸೋದ್ಯಮವನ್ನು ಸಹ ಉತ್ತೇಜಿಸುತ್ತದೆ. ಇದರಿಂದ ವ್ಯಾಪಾರ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಪಾಂಡವರ ಪ್ರತಿಮೆಗಳು ತ್ಯಾಗ, ಧೈರ್ಯ, ಸದಾಚಾರ ಮತ್ತು ನ್ಯಾಯದ ಸಂಕೇತಗಳಾಗಲಿವೆ. ಯುವ ಪೀಳಿಗೆಯನ್ನು ಭಾರತೀಯ ಆದರ್ಶಗಳೊಂದಿಗೆ ಬೆಸೆಯುತ್ತವೆ ಎಂದು ಖಂಡೇಲ್ವಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.




