
ಬೆಂಗಳೂರು : ನಿನ್ನೆ (ಮಂಗಳವಾರ)ಸಂಜೆ ಮೆಜೆಸ್ಟಿಕ್ ನಲ್ಲಿ (ಬಿಸಿಸಿ) ಬ್ಯಾರಿ ಸೆಂಟ್ರಲ್ ಕಮಿಟಿಯ ನೂತನ ಕಛೇರಿಯನ್ನು ಉದ್ಘಾಟನೆಗೈದ ಸ್ಪೀಕರ್ ಯು ಟಿ ಖಾದರ್ ರವರು ಹಲವು ಮಾತುಗಳನ್ನಾಡಿದರು. ಬೆಂಗಳೂರಿನಲ್ಲಿರುವ ಬ್ಯಾರಿಗಳ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ ಆರಂಭವಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು.
ಮಂಗಳವಾರ ಸಂಜೆ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರಾವಳಿಯ ಬ್ಯಾರಿ ಸಮುದಾಯದ ಮಂದಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳುವವರು. ಇತ್ತೀಚಿನ ವರ್ಷಗಳಲ್ಲಿ ಸಮುದಾಯದ ಯುವಕರು ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಸೇರಿದಂತೆ ನಾನಾ ಉದ್ದೇಶಗಳಿಗಾಗಿ ಬಂದು ತಮ್ಮದೇ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾನು ರಾಜಕೀಯದಲ್ಲಿ ಸ್ಪೀಕರ್ ಹುದ್ದೆಗೆ ಏರುವುದಕ್ಕೆ ನಮ್ಮ ಬ್ಯಾರಿ ಸಮುದಾಯವು ಸೇರಿದಂತೆ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸದ ಜೊತೆಗೆ ಹಿರಿಯರ ಆಶೀರ್ವಾದವೂ ಕಾರಣ” ಎಂದು ಸಂತೋಷ ವ್ಯಕ್ತಪಡಿಸಿದರು.

ಹಾಗೆಯೇ ಇತ್ತೀಚೆಗೆ ಅವರ ಮೇಲೆ ಮಾಜಿ ಸ್ಪೀಕರ್ ರವರು ಮಾಡಿದ ಅಕ್ರಮದ ಆರೋಪಗಳ ಕುರಿತು ಮಾತನಾಡಿ ““ಬ್ಯಾರಿ ಸಮುದಾಯದ ಹೆಸರನ್ನು ಯಾವತ್ತೂ ಕೆಡಿಸಿಲ್ಲ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ, ಕೆಲಸಗಳು ನೆನಪಿನಲ್ಲಿರುತ್ತದೆ. ವಿಧಾನಸೌಧದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕೆ ಇವತ್ತು ಟೀಕೆಗಳು ಬರುತ್ತಿವೆ. ವಿಧಾನಸೌಧದಲ್ಲಿ ಪಾಳುಬಿದ್ದಿದ್ದ ಬಾಗಿಲನ್ನು ಸರಿ ಮಾಡಿಸಿದ್ದಕ್ಕೆ ಇವತ್ತು ಕೆಲವರು ಪ್ರಶ್ನಿಸುತ್ತಿದ್ದಾರೆ. ಊಟ ಕೊಟ್ಟದ್ದನ್ನೂ ಈಗ ಪ್ರಶ್ನಿಸುತ್ತಿದ್ದಾರೆ. ತಿನ್ನುವಾಗ ಯಾರೂ ಕೇಳಿರಲಿಲ್ಲ. ಟೀಕೆ ಮಾಡುವವರಿಗೆಲ್ಲ ಯಾರು ಉತ್ತರ ಕೊಟ್ಟುಕೊಂಡು ಹೋಗೋದು? ಕೆಲಸ ಮಾಡುವುದಕ್ಕೆ ಶ್ರಮ, ಯೋಚನೆ, ಯೋಜನೆಯ ಅಗತ್ಯವಿದೆ. ಆದರೆ, ಟೀಕೆ ಮಾಡುವುದಕ್ಕೆ ಇವ್ಯಾವುದೂ ಬೇಕಿಲ್ಲ. ನಾನು ಯಾವತ್ತೂ ಕೂಡ ಬ್ಯಾರಿ ಸಮುದಾಯದ ಹೆಸರನ್ನು ಕೆಡಿಸಿಲ್ಲ, ಇನ್ನು ಮುಂದೆಯೂ ಕೆಡಿಸಲ್ಲ. ಈ ಬಗ್ಗೆ ಈಗಾಗಲೇ ನನ್ನ ಕ್ಷೇತ್ರದ ಜನರ ಸಹಿತ ಎಲ್ಲರಲ್ಲಿಯೂ ತಿಳಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.



