
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ POCSO ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ತಾತ್ಕಾಲಿಕ ತಡೆ ವಿಧಿಸಿರುವ ಹಿನ್ನೆಲೆಯಲ್ಲಿಯೇ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಹೈಕೋರ್ಟ್ ಕ್ವಾಶ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ್ದ ಮೇಲೆ, ಯಡಿಯೂರಪ್ಪರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ, ವಿಚಾರಣೆಯ ಪ್ರಗತಿಯನ್ನು ಸ್ಥಗಿತಗೊಳಿಸಿ, ಕರ್ನಾಟಕ ಸರ್ಕಾರದಿಂದ ಸ್ಪಷ್ಟನೆ ಕೇಳಲು ಅಗ್ರ ನ್ಯಾಯಾಲಯ ನಿರ್ದೇಶಿಸಿದೆ.
ದಾಖಲೆಯ ಪ್ರಕಾರ, 17 ವರ್ಷದ ಬಾಲಕಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ 2024ರ ಮಾರ್ಚ್ ತಿಂಗಳಲ್ಲಿ FIR ದಾಖಲಿಸಲಾಗಿತ್ತು. ನಂತರ ನಡೆದ ತನಿಖೆಯಲ್ಲಿ CID ವರದಿ ಸಲ್ಲಿಕೆಯಾಗಿದ್ದು, ವಿಶೇಷ ನ್ಯಾಯಾಲಯವು ಪ್ರಕರಣಕ್ಕೆ cognizance ತೆಗೆದುಕೊಂಡು ವಿಚಾರಣಾ ಕ್ರಮಗಳನ್ನು ಆರಂಭಿಸಿತ್ತು. ಹೈಕೋರ್ಟ್ cognizance ಆದೇಶವನ್ನು ಒಮ್ಮೆಯು ರದ್ದು ಮಾಡಿದ್ದರೂ, ಪ್ರಕರಣದ ಮೂಲ FIR ಹಾಗೂ ತನಿಖಾ ದಾಖಲೆಗಳು ಯಥಾಸ್ಥಿತಿಯಲ್ಲಿ ಉಳಿದಿದ್ದರಿಂದ ವಿಶೇಷ ನ್ಯಾಯಾಲಯವು ಪುನಃ summons ಹೊರಡಿಸಿತ್ತು. ಈ ಆದೇಶಗಳ ವಿರುದ್ಧ ಯಡಿಯೂರಪ್ಪರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ನಂತರವೇ ಅವರು ಸುಪ್ರೀಂ ಕೋರ್ಟ್ಗೆ ಮೊರೆ ಹೋದರು.
ಸುಪ್ರೀಂ ಕೋರ್ಟ್ ಇಂದು ನೀಡಿದ ತಾತ್ಕಾಲಿಕ ತಡೆ ಆದೇಶದೊಂದಿಗೆ, ಪ್ರಕರಣದ ವಿಚಾರಣೆ ಮುಂದಿನ ಸೂಚನೆ ಬರುವವರೆಗೆ ನಿಲ್ಲಲಿದೆ. ರಾಜ್ಯ ಸರ್ಕಾರ ತಮ್ಮ ಅಭಿಪ್ರಾಯವನ್ನು ಸಲ್ಲಿಸಿದ ನಂತರ ವಿಚಾರಣೆಯನ್ನು ಮುಂದುವರೆಸಬೇಕೇ ಅಥವಾ ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸಬೇಕೇ ಎಂಬುದರ ಕುರಿತು ಅಗ್ರ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಆರೋಪಗಳನ್ನು ಮೊದಲ ದಿನದಿಂದಲೂ ಖಂಡಿಸುತ್ತಿರುವ ಯಡಿಯೂರಪ್ಪರಿಗೆ ಇದು ಕಾನೂನುಬದ್ಧವಾದ ಪ್ರಮುಖ ರಿಲೀಫ್ ಆಗಿದೆ.
ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿದ್ದು, ಪ್ರಕರಣದ ಮುಂದಿನ ಹಂತಗಳು ಹೇಗೆ ಸಾಗುತ್ತವೆ ಎಂಬುದನ್ನು ಈಗ ರಾಜ್ಯದ ನ್ಯಾಯಾಂಗ ಮತ್ತು ರಾಜಕೀಯ ವಲಯಗಳು ಗಮನದಿಂದ ಕಾದು ನೋಡುತ್ತಿವೆ.



