ರಾಜ್ ಬಿ ಶೆಟ್ಟಿ ಅವರು ಚಿತ್ರರಂಗದಲ್ಲಿ ಕೇವಲ ಅರ್ಹತೆ ಮತ್ತು ಪ್ರತಿಭೆ ಮಾತ್ರ ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ‘ಬಡವರ ಮಕ್ಕಳು ಬೆಳೆಯಬೇಕು’ ಎಂಬ ಮಾತನ್ನು ವಿರೋಧಿಸಿ, ಕಷ್ಟಪಟ್ಟದ್ದನ್ನು ಟ್ರಂಪ್ ಕಾರ್ಡ್ ಆಗಿ ಬಳಸುವುದನ್ನು ಖಂಡಿಸಿದ್ದಾರೆ. ಕಲಿಯುವ ಮನಸ್ಸಿನ ಬಡತನವೇ ಮುಖ್ಯ ಎಂಬ ಅವರ ಮಾತನ್ನು ಉಪೇಂದ್ರ ಕೂಡ ಬೆಂಬಲಿಸಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ಆಡುವ ಮಾತುಗಳು ಸಾಕಷ್ಟು ಗಮನ ಸೆಳೆಯುತ್ತವೆ. ಅವರು ಪ್ರತಿ ಮಾತನ್ನು ತೂಕದಿಂದಲೇ ಆಡುತ್ತಾರೆ. ‘ಬಡವರ ಮಕ್ಕಳು ಬೆಳಿಬೇಕು’ ಎಂಬ ಮಾತಿದೆ. ಈ ಮಾತಿಗೆ ರಾಜ್ (Raj B Shetty) ವಿರೋಧ ಹೊರಹಾಕಿದ್ದಾರೆ. ನಿಜವಾದ ಪ್ರತಿಭೆ ಬೆಳೆಯಬೇಕು ಎಂಬುದು ರಾಜ್ ಅವರ ಅಭಿಪ್ರಾಯ. ಆ್ಯಂಕರ್ ಅನುಶ್ರೀ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಚಿತ್ರರಂಗದಲ್ಲಿ ಅವಕಾಶ ಕೊಡೋದಿಲ್ಲ ಎಂಬ ಮಾತು ಆಗಾಗ ಹೊಸ ಮುಖಗಳು ಹೇಳೋದಿದೆ.ಆದರೆ, ಅವಕಾಶ ಏಕೆ ಕೊಡಬೇಕು ಎಂದು ರಾಜ್ ಬಿ ಶೆಟ್ಟಿ ಪ್ರಶ್ನೆ.‘ನಾವು ಯಾರಿಗೋ ಏಕೆ ಅವಕಾಶ ಕೊಡಬೇಕು? ಅವಕಾಶ ಕೊಡೋದು ಅಲ್ಲ. ಅವಕಾಶಕ್ಕೆ ನಾನು ಅರ್ಹನಾಗಬೇಕು’ ಎಂದು ಹೇಳಿದ್ದಾರೆ.
‘ಬಡವರ ಮಕ್ಕಳು ಬೆಳಿಬೇಕು ಅಂತಾರೆ. ಇಲ್ಲಿ ಅದು ಮುಖ್ಯವಲ್ಲ. ಅರ್ಹತೆ ಅಷ್ಟೇ ಮುಖ್ಯ. ಬಡತನ ತಲೆಯಲ್ಲಿ ಇರಬೇಕು. ನಾನು ಇನ್ನು ಕಲಿಯಬೇಕು ಎನ್ನುವ ಬಡತನ ಬೇಕು’ ಎಂದರು ರಾಜ್. ಅವರ ಮಾತಿಗೆ ಉಪ್ಪಿ ಕೈ ಮುಗಿದರು. ‘ರಾಜ್ ಹೇಳಿದ ರೀತಿ ಇಷ್ಟ ಆಯಿತು’ ಎಂದಿದ್ದಾರೆ ಉಪೇಂದ್ರ.
ಉಪೇಂದ್ರ ಕಷ್ಟದಿಂದಲೇ ಬಂದವರು. ನಾನು ಕಷ್ಟದಿಂದಲೇ ಬಂದಿದ್ದೇನೆ. ಅದು ಯಾರಿಗೆ ಬೇಕು? ಯಾಕೆ ಬೇಕು? ನಾನು ನನಗಸೋಸ್ಕರ ಕಷ್ಟಪಟ್ಟಿದ್ದು. ಅದರಲ್ಲಿ ಅಳೋದು ಏನಿದೆ? ಅದನ್ನು ಟ್ರಂಪ್ ಕಾರ್ಡ್ ಆಗಿ ಬಳಸೋದು ಏಕೆ’ ಎಂದು ರಾಜ್ ಪ್ರಶ್ನೆ ಮಾಡಿದ್ದಾರೆ.
ರಾಜ್ ಮಾತನ್ನು ಅನೇಕರು ಒಪ್ಪಿದ್ದಾರೆ. ಚಿತ್ರರಂಗಕ್ಕೆ ಬಂದ ನಂತರ ಅನೇಕರು ಬಡವರ ಮಕ್ಕಳು, ಕಷ್ಟದಿಂದ ಬಂದಿದ್ದೇನೆ ಎಂದೆಲ್ಲ ಟ್ರಂಪ್ ಕಾರ್ಡ್ ಬಳಸಿಕೊಳ್ಲಲು ಹೋಗುತ್ತಾರೆ. ಇದೆಲ್ಲ ಮಾಡುವ ಬದಲು ಕೆಲಸ ಕಲಿಯಬೇಕು ಎಂಬುದು ರಾಜ್ ಅವರ ಕೋರಿಕೆ. ಅವರ ನಟನೆಯ ‘45’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ಶಿವಣ್ಣ ಕೂಡ ನಟಿಸಿದ್ದಾರೆ.




