
ಹೈದರಾಬಾದ್, ಜುಲೈ ೨೪: ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದಲ್ಲಿ 25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕೊಠಡಿಯಲ್ಲಿ ಸಿಕ್ಕ ಎಸ್.ಐ.ಆರ್. (S.I.R) ಫಾರಂನಲ್ಲಿ ಬರೆದ ಡೆತ್ ನೋಟ್ನಲ್ಲಿ “ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ” ಎಂದು ಉಲ್ಲೇಖಿಸಿರುವುದು ಭಾರೀ ಸಂಚಲನ ಮೂಡಿಸಿದೆ. ಮೃತನನ್ನು ವೃತ್ತಿಯಲ್ಲಿ ಪೇಂಟರ್ ಆಗಿದ್ದ ಪಿ. ವಂಶಿ (25) ಎಂದು ಗುರುತಿಸಲಾಗಿದ್ದು, ಈ ಘಟನೆಯು ಸ್ಥಳೀಯವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪೊಲೀಸರ ಹಾಗೂ ಮೃತನ ಕುಟುಂಬಸ್ಥರ ಮಾಹಿತಿಯಂತೆ, ವಂಶಿ ಇಂಟರ್ಮೀಡಿಯೇಟ್ವರೆಗೆ ಶಿಕ್ಷಣ ಮುಗಿಸಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಕೌಟುಂಬಿಕ ವಿಚಾರ ಹಾಗೂ ಮದ್ಯಪಾನದ ಅಭ್ಯಾಸಕ್ಕೆ ಸಂಬಂಧಿಸಿದಂತೆ ತಾಯಿ ಭಾರತಿ ಅವರೊಂದಿಗೆ ವಾಗ್ವಾದ ನಡೆದ ನಂತರ ಅವರು ಮನೆಯಿಂದ ಹೊರಹೋಗಿದ್ದರು. ಬಳಿಕ ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ಮರಳಿ ಊಟ ಮಾಡಿ ತಮ್ಮ ಕೊಠಡಿಯಲ್ಲಿ ಮಲಗಿದ್ದರೆಂದು ತಿಳಿದುಬಂದಿದೆ.
ಗುರುವಾರ ಬೆಳಿಗ್ಗೆ ಕೊಠಡಿಯಿಂದ ಟಿವಿ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ತಂದೆ ಬಾಲಯ್ಯ ಅವರು ಪರಿಶೀಲಿಸಿದಾಗ, ವಂಶಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯೆಲ್ಲಾರೆಡ್ಡಿಪೇಟೆ ಪೊಲೀಸರು, ವಂಶಿ ಅವರ ಸಹಿಯಿದ್ದ ಖಾಲಿ ಎಣಿಕೆ ನಮೂನೆಯಲ್ಲಿ ತೆಲುಗು ಭಾಷೆಯಲ್ಲಿ ಬರೆದಿದ್ದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ “ಗೌರವಾನ್ವಿತ ಪೊಲೀಸರೇ, ನನ್ನ ತೊಂದರೆಯನ್ನು ನೀವು ಅರ್ಥಮಾಡಿಕೊಳ್ಳುತ್ತೀರ ಎಂದು ಭಾವಿಸುತ್ತೇನೆ. ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ. ನನ್ನ ಕುಟುಂಬಕ್ಕೆ ತೊಂದರೆ ಕೊಡಬೇಡಿ” ಎಂದು ಬರೆಯಲಾಗಿತ್ತು.
ಅಷ್ಟೇ ಅಲ್ಲದೆ, ವಂಶಿ ಈ ಡೆತ್ ನೋಟ್ನ ಫೋಟೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿಯೂ ಹಂಚಿಕೊಂಡಿದ್ದರು. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ವಂಶಿ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಕೌಟುಂಬಿಕ ಸಮಸ್ಯೆಗಳು ಹಾಗೂ ತಾಯಿಯೊಂದಿಗಿನ ಜಗಳದ ಕೋನದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಧಾನ ಮಂತ್ರಿಯವರ ಹೆಸರನ್ನು ಉಲ್ಲೇಖಿಸಿ ಬರೆದಿರುವ ಈ ಡೆತ್ ನೋಟ್ನಿಂದಾಗಿ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಮುಂದಿನ ತನಿಖೆ ಕಾಯ್ದುಕೊಂಡಿದ್ದಾರೆ.



